14/12/2020
ನಮ್ಮೂರಿನ ಗೋಮಾಳ ಉಳಿಸಿಕೊಳ್ಳುವುದಕ್ಕೆ ನಾವೆಷ್ಟು ಶ್ರಮ ಪಡಬೇಕಾಗುತ್ತದೆ ಅನ್ನೋದು ಈ ಕ್ಷಣಕ್ಕೂ ನಮಗೆ ಗೊತ್ತಿಲ್ಲ. ಏಕೆಂದರೆ, ಸೈನಿಕ್ ಶಾಲೆ ಮಾಡ್ತೀವಿ. ಅದರಿಂದ ನಮ್ಮೆಲ್ಲರ ಉದ್ಧಾರ ಆಗುತ್ತದೆ ಎಂದು ಅವರೆಲ್ಲ ಹೇಳ್ತಿದ್ದಾರೆ. ಈ ಪರಿಸರದಲ್ಲೇ ಹುಟ್ಟಿ- ಬೆಳೆದವರೂ ಅವೇ ಮಾತುಗಳನ್ನು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
"ನೀವು ಆಗುಂಬೆ ಕಡೆಯವರಾ?" ಎಂದು ಬೇರೆ ಊರು- ಜಿಲ್ಲೆಯವರು ಕಣ್ಣರಳಿಸಿ ನೋಡುತ್ತಿದ್ದರೆ, ಹೆಮ್ಮೆ ಪಡುತ್ತಿದ್ದ ನಾವು ಇನ್ನು ಮುಂದೆ ಹಾಗಿರುವುದಕ್ಕೆ ಸಾಧ್ಯವಾ? ಸನ್ನಿವೇಶ ಹೀಗೇ ಮುಂದುವರಿದರೆ ಅಂಥದ್ದೊಂದು ಹೆಮ್ಮೆ ನಮಗೆ ಉಳಿಯೋದು ಖಂಡಿತಾ ಅನುಮಾನ.
ಸಿಮೆಂಟ್, ಕಬ್ಬಿಣದ ಕಲ್ಲು ಕಟ್ಟಡಗಳು, ನಾಲ್ಕಾರು ಹೋಟೆಲ್, ಬಸ್ ಓಡಾಟ ಇವೆಲ್ಲವನ್ನೂ ಅಭಿವೃದ್ಧಿ ಅಂದುಕೊಂಡವರ ಎದುರು ನಿಂತು ಮಾತನಾಡೋಕೆ ನಮ್ಮವರು ಅಂತ ಬೇಡವಾ? ನಮಗೆ ಈ ಸೈನಿಕ್ ಶಾಲೆ, ಅಭಿವೃದ್ಧಿ ಯಾವುದೂ ಬೇಡ. ನಮ್ಮೂರಿನ ಗೋಮಾಳ, ಪರಿಸರ ಹಾಗೇ ಇರಲು ಬಿಡಿ ಸಾಕು ಎಂದು ಗಟ್ಟಿಯಾಗಿ ಹೇಳಲು ಒಬ್ಬ ಜನಪ್ರತಿನಿಧಿ ಬೇಡವಾ?
ಆ ಕಾರಣದಿಂದಲೇ ಈಗಿನ ನಮ್ಮ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮೆಲ್ಲರ ಧ್ವನಿಗೆ ಗಂಟಲು ಎಂಬ ರೀತಿಯಲ್ಲಿ ಕೆಲಸ ಮಾಡುವ, ಓದಿಕೊಂಡಿರುವ, ಯಾರ ಮುಲಾಜಿಗೂ ಬೀಳದ ಒಬ್ಬ ವ್ಯಕ್ತಿಯನ್ನು ಆರಿಸಿಕೊಳ್ಳೋಣ. ಅದನ್ನು ಬಿಟ್ಟು ನಾಯಕರನ್ನು ಮೆಚ್ಚಿಸಿಕೊಂಡು ಓಡಾಡುವವರನ್ನು ಆರಿಸಿ, ಏನು ಮಾಡೋದು?
ನಮ್ಮ ಗೋಮಾಳ, ನೆಲ- ಪರಿಸರ ಈಗ ಹೇಗಿದೆಯೋ ಹಾಗೇ ಉಳಿಸಿಕೊಳ್ಳುವುದಕ್ಕೆ ಕೈ ಜೋಡಿಸುವವರಿದ್ದರೆ ಅಂಥವರಿಗೆ ನಮ್ಮ ಓಟು. ಇಷ್ಟನ್ನು ನಾವು ನಿರ್ಧಾರ ಮಾಡಿದ್ದೀವಿ.
ಅಂದ ಹಾಗೆ ಸೈನಿಕ್ ಶಾಲೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಇನ್ನೇನಿದ್ದರೂ ಗ್ರಾಮ ಪಂಚಾಯಿತಿ ಎಲೆಕ್ಷನ್ ಗೆ ನಿಲ್ಲುವವರು ತೀರ್ಮಾನಿಸಿ.
;sri.Mata
Yes, please think twice before you give vote. One must have the idea of development by conserving the nature and our society.
Else,what we will leave for our next generation?
Only barren land and concrete buildings.
Let the nature and all be like this only.